ಶಕ್ಯೋ ವಾರಯಿತುಂ ಜಲೇನ ಹುತಭುಕ್ ಶೂರ್ಪೇಣ ಸೂರ್ಯಾತಪೋ ನಾಗೇಂದ್ರೋ
ನಿಶಿತಾಂಕುಶೇನ ಸಮದೋ ದಂಡೇನ ಗೌಗರ್ಧಭಃ |
ವ್ಯಾಧಿರ್ಭೇಷಜಸಂಗ್ರಹೈಶ್ಚ ವಿವಿಧೈರ್ಮಂತ್ರಪ್ರಯೋಗೈರ್ವಿಷಂ
ಸರ್ವಸ್ಯೌಷಧಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಮ್ ||10||
शक्यो
वारयितुं जलेन हुतभुक् शूर्पेण सूर्यातपो नागेन्द्रो निशितांकुशेन समदो दंडेन गौगर्धभः|
व्याधिर्भेषजसङ्ग्रहैश्च
विविधैर्मन्त्रप्रयोगैर्विषं सर्वस्यौषधमस्ति शास्त्रविहितं मूर्खस्य नास्त्यौषधम्
||10||
śakyō
vārayituṁ jalēna hutabhuk śūrpēṇa sūryātapō nāgēndrō niśitāṅkuśēna
samadō daṇḍēna gaugardhabhah |
vyādhirbhēṣajasaṅgrahaiśca
vividhairmantraprayōgairviṣaṁ sarvasyauṣadhamasti śāstravihitaṁ mūrkhasya
nāstyauṣadham ||10||
ಮೂರ್ಖತ್ವ ನಿವಾರಣೆಗೆ ಯಾವ ಮದ್ದೂ ಇಲ್ಲ ಅನ್ನುವ ಅಭಿಪ್ರಾಯವನ್ನು
ಭರ್ತೃಹರಿ ವ್ಯಕ್ತಪಡಿಸಿದ ಸುಂದರ ಶ್ಲೋಕವಿದು...
ಒಂದು ವೇಳೆ ಒಂದು ಮನೆಗೇ ಬೆಂಕಿ ಬಿದ್ದರೂ ನೀರಿನಿಂದ ಆ ಬೆಂಕಿಯನ್ನು
ಉಪಶಮನ ಮಾಡಬಹುದು... ಅಗ್ನಿಪ್ರಕೋಪಕ್ಕೆ ಮದ್ದು ಉಂಟು..
ತಡೆಯಲಿಕ್ಕಾಗದ ಬಿಸಿಲಿನ ಬೇಗೆಗೆ ಕೊಡೆ ಹಿಡಿಯುವುದರಿಂದ ಸೂರ್ಯನ
ಬಿಸಿಲಿನ ತಾಪವನ್ನು ನಿವಾರಿಸಿಕೊಳ್ಳಬಹುದು. ಹೀಗೆ ಬಿಸಿಲಿನ ಬೇಗೆಗೂ ಮದ್ದು ಉಂಟು..
ಇಲ್ಲಿ ಭರ್ತೃಹರಿ ಕೊಡೆಗೆ "ಶೂರ್ಪ" ಅನ್ನುವ ಶಬ್ದ
ಪ್ರಯೋಗ ಮಾಡಿದ್ದಾನೆ, ಆದರೆ
ಸಂಸ್ಕೃತದಲ್ಲಿ ಶೂರ್ಪಕ್ಕೆ ಕೊಡೆ ಅನ್ನುವ ಅರ್ಥ ಕೂಡುವುದಿಲ್ಲ.. ಶೂರ್ಪ ಅಂದರೆ ಅಕ್ಕಿಗೇರುವ
ಗೆರಸೆ ಅಥವಾ ಮೊರ ಅಂತ ಅರ್ಥ..
ಸಂಸ್ಕೃತದಲ್ಲಿ (ಛತ್ರಿಗೆ) ಕೊಡೆಗೆ "ಆತಪತ್ರ" ಅಂತ ಹೆಸರು... ಹಿಂದೆ ರಾಜರು
ನಡೆದು ಹೋಗುವಾಗ ಬಿಸಿಲು ಬೀಳದಂತೆ ದೂತರು ಕೊಡೆ ಹಿಡಿಯುತ್ತಿದ್ದರು.. ಈ ಶಬ್ದಗಳು ಬಂದದ್ದು
ಅರಸೊತ್ತಿಗೆಯಿಂದ.. ಆತತ ಪತ್ರ ಅಂದರೆ ಆತಪದಿಂದ (ಬಿಸಿಲಿನಿಂದ) ರಕ್ಷಣೆ ನೀಡುವಂತದು... ಹಿಂದೆ
ತಾಡೀವಲೆಯಿಂದ ಆತಪತ್ರವನ್ನು ತಯಾರಿಸುತ್ತಿದ್ದರು, ಬಟ್ಟೆಯಿಂದಲ್ಲ.
ಬಿಡಿಸಿದಾಗ ಛತ್ರಿಯಂತೆ ಅಗಲವಾಗುವಂತದು ಆತಪತ್ರ...
ಇಂದು ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ದೇವರ ಪ್ರತಿಮೆಯ ಉತ್ಸವ
ಹೋಗುವಾಗ ದೇವರ ಪ್ರತಿಮೆಗೆ ಬಿಸಿಲು ಬೀಳದಂತೆ ಈ ರೀತಿಯ ಕೊಡೆ ಹಿಡಿಯುತ್ತಾರೆ...
ಮದವೇರಿದ ಆನೆ ಕೂಡ, ನಿಶಿತವಾದ (ಚೂಪಾದ) ಅಂಕುಶದಿಂದ ಅದರ ಕಿವಿಯ ಹಿಂಭಾಗದ
ಮರ್ಮಸ್ಥಾನಕ್ಕೆ ತಿವಿದಾಗ, ಅತಿಯಾದ
ವೇದನೆಯಿಂದಾಗಿ ಮಾವುತನ ನಿಯಂತ್ರಣಕ್ಕೆ ಬಂದು ಬಿಡುತ್ತದೆ..
ವರಾಹ ಅವತಾರದಲ್ಲಿ ಭಗವಂತ ಕೂಡ ಆದಿದೈತ್ಯನನ್ನು ಕೊಂದದ್ದು "ಕರ್ಣತಾಡನಾತ್" ಕಿವಿಗೆ
ಹೊಡೆಯುವುದರಿಂದಲೆ.. ಸಾಮಾನ್ಯವಾಗಿ ಎಲ್ಲ ಪ್ರಾಣಿಗಳಲ್ಲಿ ಕಿವಿಯ ಹಿಂಭಾಗ ಅತಿವೇದನೆ ತರಿಸುವಂತಹ
ಮರ್ಮಸ್ಥಾನವಾಗಿರುತ್ತದೆ...
ಹೀಗೆ ಮತ್ತೇರಿದ ಆನೆಯನ್ನಾದರೂ ಬೆತ್ತ ಮತ್ತು ಅಂಕುಶದಿಂದ ನಿಯಂತ್ರಿಸಬಹುದು...
ಹಸು - ಕತ್ತೆಗಳಂತ ಸಾಕು ಪ್ರಾಣಿಗಳು ಮಾತು ಕೇಳದೆ ತಿರುಗಿ ಬಿದ್ದಾಗ
ಅಥವಾ ನಮ್ಮನ್ನು ಅಟ್ಟಿಸಿಕೊಂಡು ಬಂದಾಗ ದಂಡ ಪ್ರಯೋಗದಿಂದ ಅವುಗಳನ್ನು ನಿಯಂತ್ರಿಸಬಹುದು...
ಯಾವುದೇ ವ್ಯಾಧಿ ಅಥವಾ ಕಾಯಿಲೆಳಿಗೆ ಶಾಸ್ತ್ರವಿಹಿತವಾದ ಔಷಧಗಳಿವೆ
ಅವುಗಳ ಸಂಗ್ರಹ ಮತ್ತು ಉಪಚಾರಗಳಿಂದ ಎಂಥ ರೋಗವನ್ನೂ ಗುಣಪಡಿಸಿಕೊಳ್ಳಬಹುದು...
ಯಾರೋ ಒಬ್ಬನಿಗೆ ಹಾವು ಕಚ್ಚಿ ದೇಹದಲ್ಲಿ ವಿಷ ಏರಿತು ಅಥವಾ ಯಾರೋ
ಒಬ್ಬ ವಿಷ ಕುಡಿದ, ಇದಕ್ಕೂ
ಶಾಸ್ತ್ರದಲ್ಲಿ ಹೇಳಿರುವ ಮಾಂತ್ರಿಕ ವಿಧಾನ, ತಾಂತ್ರಿಕ ವಿಧಾನಗಳಿವೆ... ಅವುಗಳ ಪ್ರಯೋಗದಿಂದ ವಿಷವನ್ನೂ ದೇಹದಿಂದ
ಹೊರತೆಗೆದು ವಿಷಮುಕ್ತರಾಗಬಹುದು...
ಹೀಗೆ ಶಾಸ್ತ್ರದಲ್ಲಿ ಪ್ರತಿಯೊಂದು ಕಾಯಿಲೆಗೂ ಅಥವಾ ಯಾವುದೇ ತೊಂದರೆ
ಅಥವಾ ಸಮಸ್ಯೆಗಳಿಗೂ ಪರಿಹಾರವಿದೆ, ಔಷಧವಿದೆ ಅಂತ ಹೇಳಿದ್ದಾರೆ ಆದರೆ ಮೂರ್ಖತನಕ್ಕೆ , ಮೂರ್ಖರಿಗೆ ಯಾವ
ಮದ್ದೂ ಹೇಳಲಿಲ್ಲ... "ಮೂರ್ಖಸ್ಯ
ನಾಸ್ತ್ಯೌಷಧಮ್" ಆದ್ದರಿಂದ ಮೂರ್ಖನಿಗೆ ಔಷಧವೇ ಇಲ್ಲ.... ಅಂದರೆ ಮಂಕುತನಕ್ಕೆ ಮದ್ದಿಲ್ಲ
..
****